ಹೊ! ನೀನು ದಾವಿದನಲ್ಲವೆ
ಮಾರಾಯಾ?
ಕುರಿಮಂದೆಗೆ ಸಂಗೀತ ನುಡಿಸುತ್ತಾ
ಅವುಗಳ ಬಾಲಗಳ ಚಟಪಟಿಕೆಗೆ ಚಪ್ಪಾಳೆ ಎಂದು
ಖುಶಿಗೊಳ್ಳುತ್ತಿದ್ದ ನಿನ್ನ ಕಂಗಳಲ್ಲಿ
ಏನೋ ಕನಸಿತ್ತು ಅಲ್ಲವೆ?
ಗೊಲಿಯತ್’ನ ಹಣೆಗೆ ಕಲ್ಲು ಜಡಿದದ್ದೇ,
‘ಸಾವ್ಲನು ಸಾವಿರ ಕೊಂದ
ದಾವಿದ ಹತ್ತು ಸಾವಿರ’ ಎಂದ ಹೆಂಗಳೆಯರ
ಕುಣಿತಕ್ಕೆ ಸಾವ್ಲ ಕಂಗಾಲಾದ
ನೀನು ಕನಸೇರಿ ಕೂತೆ
ಕುರಿಮಂದೆ ಬಿಟ್ಟು ಮಂದ ಜನರ
ಒಡೆಯನಾದಾಗ ನೀನು ಮಾತ್ರ ಕೆಟ್ಟೆ
ಸೈನಿಕರು ಯುದ್ದ ಭೂಮಿಯಲ್ಲಿ
ಎದೆಗೊಟ್ಟು ನಿಂತಾಗ
ನೀನು ಮಾತ್ರ ಬಾಲ್ಕನಿಯಲಿ ಸುತ್ತಾಡುತ್ತಾ
ಬೆತ್ಶೆಬಾಳ ಎದೆಯೊಳಗೆ ಸೆರೆಯಾದೆ!
ಥತ್ತ್!
ಏನೇನೋ ನೆನಪಿಸುತ್ತೀಯಾ
ಸದನದಲ್ಲಿ ಅದೆಷ್ಟು ದಾವಿದರನ್ನು ಕಂಡಿಲ್ಲ!
ಮಂದಮತಿಯ ಕುರಿಮಂದೆ ನಾವೇ
ನೀವುಗಳ ಎಲ್ಲಾ ‘ಸುಕೃತಿ’ಗಳಿಗೆ
ನಮ್ಮ ಬಾಲಗಳ ಚಟಪಟಿಕೆ ಇದ್ದೇ ಇರುತ್ತದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ